ಪುತ್ತೂರು ಪಟ್ಟಣದಿಂದ ಸುಳ್ಯ ಮಾರ್ಗದಲ್ಲಿ ಸಂಟ್ಯಾರು ಎಂಬಲ್ಲಿ ಬಲಕ್ಕೆ ತಿರುಗಿ 9 ಕಿ.ಮೀ ಪ್ರಯಾಣಿಸಿದಾಗ ಪ್ರಕೃತಿ ಮಧ್ಯೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯ ಗೋಚರಿಸುತ್ತದೆ. ಕೃತ ಯುಗದಲ್ಲಿ ಶಿವಭಕ್ತನಾದ ಖರಾಸುರನೆಂಬ ಸಂಚಾರಿ ರಾಕ್ಷಸನಿದ್ದನಂತೆ. ಆತ ಕಾಶಿಯಿಂದ ಮೂರು ಲಿಂಗಗಳನ್ನು ಏಕ ಕಾಲದಲ್ಲಿ ಬಾಯಿ ಮತ್ತು ಎರಡು ಕೈಗಳಿಂದಲೂ ತಂದನಂತೆ. ಹಾಗೆ ತಂದ ಶಿವಲಿಂಗಗಳಿಗೆ ಪ್ರಾತಃ ಕಾಲದಲ್ಲಿಯೆ ಮೂರು ಹೊತ್ತಿನ ಪೂಜೆಯನ್ನು ಹೊತ್ತು ಹೊತ್ತಿಗೆ ಒಂದರಂತೆ ಪ್ರತ್ಯೇಕ ಪ್ರತ್ಯೇಕ ಲಿಂಗಗಳಂತೆ ಪೂಜೆ ಮಾಡಿ ವಿಸರ್ಜಿಸುತ್ತಿದ್ದನಂತೆ. ಆ ರೀತಿ ವಿಸರ್ಜಿಸಲ್ಪಟ್ಟ ಲಿಂಗಗಳ ಪೈಕಿ ಬಾಯಿಯಿಂದ ತಂದ ಲಿಂಗವು ಕೇರಳ ರಾಜ್ಯದ ಕಾಸರಗೋಡಿನ ನೆಟ್ಟಣಿಗೆ ಗ್ರಾಮದಲ್ಲೂ, ಎಡಕೈಯಿಂದ ತಂದ ಲಿಂಗ ಕಾಸರಗೋಡು ತಾಲೂಕಿನ ಮುಂಡೂರು ಗ್ರಾಮದ ಆಲಂಗೂಡ್ಲು ಎಂಬಲ್ಲೂ, ಬಲಕೈಯಿಂದ ತಂದ ಲಿಂಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಕೊರಂದ್ರಪಾದೆ ಗುಡ್ಡದಲ್ಲೂ ಉದ್ಭವಿಸಿತಂತೆ…..